ಗೋಲ್ಡನ್ ಐ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿರುವ ‘ಒಮ್ಮೊಮ್ಮೆ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಅಕ್ಷಯ ತೃತೀಯದ ಶುಭದಿನದಂದು ಆರಂಭವಾಗಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ಬಾಬು ಹಾಗೂ ಉದ್ಯಮದ ಹಲವು ಗಣ್ಯರು ಅಂದಿನ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಕಿರಣ್ಗೋವಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದು, ನಾಗಶೇಖರ್ ಹಾಗೂ ಶಿವರಾಜ್ ಅವರೊಂದಿಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ವಿಭಿನ್ನ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ನಾಗಶೇಖರ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನನ್ನ ಪಾತ್ರ ಚಾರ್ಲ್ಚಾಪ್ಲಿನ್ ತರಹ. ಎಲ್ಲರನ್ನು ನಗಿಸಿ ತಾನು ಅಳವ ಪಾತ್ರ ಎಂದು ನಾಗಶೇಖರ್ ತಮ್ಮ ಪಾತ್ರದ ವಿವರಣೆ ನೀಡಿದ್ದಾರೆ. ರಾಗಿಣಿ ಹಾಗೂ ಜನ್ನಿಫ಼ರ್ ಕೊತ್ವಾಲ್ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ನಾಯಕಿಯ ಆಯ್ಕೆ ನಡೆಯುತ್ತಿದೆ.
ಎಸ್.ವಿ.ರಾಜೇಂದ್ರಸಿಂಗ್ಬಾಬು, ಜೋಸೈಮನ್, ಪ್ರೇಮ್, ದಿನಕರ್ತೂಗುದೀಪ್, ಅರ್ಜುನ್ ಸೇರಿದಂತೆ ಕನ್ನಡ ಚಿತ್ರರಂಗದ ೩೨ಜನ ಹೆಸರಾಂತ ನಿರ್ದೇಶಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ ಬಿಡುಗಡೆಯಾಗುತ್ತಿದೆ. ಅದೇ ದಿನ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಜೋನಿಹರ್ಷರ ಸಂಕಲನ ಈ ನೂತನ ಚಿತ್ರಕ್ಕಿದೆ.